ಸತ್ಯಭಾಮಾ
	ಕೃಷ್ಣನ ಅಷ್ಟ ಮಹಿಷಿಯರಲ್ಲಿ ಒಬ್ಬಳು. ಯದು ವಂಶಕ್ಕೆ ಸೇರಿದ ಸತ್ರಾಜಿತನ ಮಗಳು. ಒಮ್ಮೆ ಅರ್ಜುನ ಪ್ರಭಾಸತೀರ್ಥಕ್ಕೆ ಬಂದಾಗ ಸುಭದ್ರೆಯ ವೃತ್ತಾಂತ ತಿಳಿದು ಚಿಂತಾತುರನಾಗಿ ಕೃಷ್ಣನನ್ನು ಧ್ಯಾನಿಸತೊಡಗಿದ. ಆ ಸಮಯದಲ್ಲಿ ಅತ್ತ ಕೃಷ್ಣ ಸತ್ಯಭಾಮೆಯೊಂದಿಗೆ ಸುಖಸಂಕಥಾ ವಿನೋದದಲ್ಲಿದ್ದು, ಅರ್ಜುನನ ಧ್ಯಾನ ಮನದಟ್ಟಾಗಿ ಕೃಷ್ಣ ತನಗೆ ತಾನೇ ಒಮ್ಮೆ ನಕ್ಕ. ಅಕಸ್ಮಾತ್ತಾಗಿ ನಕ್ಕ ಕೃಷ್ಣನನ್ನು ಕಂಡು, ಆ ನಗುವಿಗೆ ಕಾರಣವೇನೆಂದು ಸತ್ಯಭಾಮೆ ಪ್ರಶ್ನಿಸಿದಳು. ಆಗ ಕೃಷ್ಣ ಅರ್ಜುನನ ವಿಚಾರವನ್ನು ಆಕೆಗೆ ತಿಳಿಸಿದ. ಕೃಷ್ಣ ನರಕಾಸುರ ನನ್ನು ಕೊಂದು ಆತ ಅಪಹರಿಸಿದ್ದ ಅದಿತಿಯ ಕುಂಡಲಗಳನ್ನು ಆಕೆಗೆ ಕೊಡುವುದಕ್ಕಾಗಿ ಸ್ವರ್ಗಕ್ಕೆ ಹೋಗಿದ್ದಾಗ ಸತ್ಯಭಾಮೆಯೂ ಸಂಗಡ ಹೋಗಿದ್ದಳು. ಪಾಂಡವರು ಅರಣ್ಯವಾಸಕ್ಕೆ ಹೋದಾಗ ಆಕೆಯೂ ಕೃಷ್ಣನ ಸಂಗಡ ಕಾಮ್ಯಕವನಕ್ಕೆ ಹೋಗಿದ್ದಳು. ಸತ್ಯಭಾಮೆ ತಾನು ಕೃಷ್ಣನನ್ನು ಮದುವೆಯಾದ ಕಥೆಯನ್ನು ದ್ರೌಪದಿಗೆ ಹೇಳಿ ಪತಿಯನ್ನು ವಶಪಡಿಸಿಕೊಳ್ಳುವ ಉಪಾಯಗಳೇನೆಂದು ದ್ರೌಪದಿಯನ್ನು ಕೇಳಿದ್ದಳು. ಈ ವೃತ್ತಾಂತಗಳು ಭಾಗವತ, ಭಾರತಗಳಲ್ಲಿ ಉಲ್ಲೇಖಗೊಂಡಿವೆ. 

	ಒಮ್ಮೆ ಕೃಷ್ಣ ತನ್ನ ಪರಿವಾರದೊಂದಿಗೆ ರೈವತಕ ಪರ್ವತಕ್ಕೆ ಹೋದಾಗ ಅಲ್ಲಿ ರುಕ್ಮಿಣಿ ಒಂದು ಉಪವಾಸವ್ರತ ಕೈಗೊಂಡು ಬ್ರಾಹ್ಮಣ ಸಂತರ್ಪಣೆ ನಡೆಸಿದಾಗ ಕೃಷ್ಣ ಅಲ್ಲಿ ನೆರೆದಿದ್ದವರಿಗೆಲ್ಲ ದಾನಧರ್ಮ ಗಳನ್ನು ಮಾಡಿ, ರುಕ್ಮಿಣಿಯ ಆಸುಪಾಸಿನಲ್ಲಿಯೇ ಅಡ್ಡಾಡುತ್ತಿದ್ದ. ಆ ಸಮಯದಲ್ಲಿ ನಾರದ ಅಲ್ಲಿಗೆ ಬಂದು, ಪಾರಿಜಾತ ಪುಷ್ಪವನ್ನು ಕೃಷ್ಣನಿಗೆ ಕೊಟ್ಟ. ಕೃಷ್ಣ ಅದನ್ನು ರುಕ್ಮಿಣಿಯ ಕೈಯಲ್ಲಿಟ್ಟ. ಅಲ್ಲಿಯೇ ಇದ್ದ ಸತ್ಯಭಾಮೆ ಇದನ್ನು ನೋಡಿ ಸಿಡಿಮಿಡಿಗೊಂಡು ಕೋಪಗೃಹ ಸೇರಿದಳು. ಆಗ ಕೃಷ್ಣನು ಸತ್ಯಭಾಮೆಯನ್ನು ಸಮಾಧಾನಪಡಿಸಿ ದೇವ ಲೋಕದಿಂದ ಪಾರಿಜಾತ ವೃಕ್ಷವನ್ನೇ ತಂದು ಸತ್ಯಭಾಮೆಯ ಮನೆ ಯಲ್ಲಿಟ್ಟ. ಇದರಿಂದ ಸುಪ್ರೀತಳಾದ ಸತ್ಯಭಾಮೆ ನನ್ನಂಥ ಪುಣ್ಯವತಿ ಬೇರೆ ಇರುವಳೆ, ಇಂಥ ಪತಿಯನ್ನು ಪಡೆಯಲು ಹಿಂದಣ ಜನ್ಮದಲ್ಲಿ ಯಾವ ನೋಂಪಿಯನ್ನು ಮಾಡಿದ್ದೆನೋ ಎಂದಾಗ ಕೃಷ್ಣನು ಸತ್ಯಭಾಮೆಯ ಹಿಂದಣ ಜನ್ಮದ ವಿವರಗಳನ್ನು ತಿಳಿಸಿ, ಮುಖ್ಯವಾಗಿ ಕಾರ್ತೀಕವ್ರತ ಮತ್ತು ಏಕಾದಶೀ ವ್ರತ ಫಲವೇ ಈ ಭಾಗ್ಯಕ್ಕೆ ಕಾರಣವೆಂದು ಹೇಳಿದ.			

			 (ಎ.ವಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ